Mohan Bhagwat Statement : ರಾವಣನ ವಧೆಯು ಅವನ ಕಲ್ಯಾಣಕ್ಕಾಗಿ ಆಯಿತು ಮತ್ತು ಅದು ಅಹಿಂಸೆಯಾಗಿತ್ತು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್

ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಯ ಕುರಿತು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಅವರ ಹೇಳಿಕೆ

ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್

ನವದೆಹಲಿ – ರಾವಣನ ವಧೆ ಅವನ ಕಲ್ಯಾಣಕ್ಕಾಗಿ ಆಯಿತು. ಶಿವಭಕ್ತ ರಾವಣ, ವೇದಗಳನ್ನು ತಿಳಿದಿದ್ದ ರಾವಣ, ಉತ್ತಮ ಆಡಳಿತಗಾರ ರಾವಣ, ಇಂತಹ ಒಳ್ಳೆಯ ಗುಣಗಳು ರಾವಣನಲ್ಲಿದ್ದವು; ಆದರೆ ಅವನು ಸ್ವೀಕರಿಸಿದ ದೇಹ, ಮನಸ್ಸು ಮತ್ತು ಬುದ್ಧಿಯಿಂದಾಗಿ ಈ ಒಳ್ಳೆಯ ಗುಣಗಳು ಅವನಲ್ಲಿ ಬೆರೆಯಲಿಲ್ಲ. ಆದ್ದರಿಂದ ಆ ದೇಹ, ಮನಸ್ಸು ಮತ್ತು ಬುದ್ಧಿಯನ್ನು ನಾಶಪಡಿಸಲಾಯಿತು. ಈ ಕಾರಣದಿಂದಲೇ ರಾವಣನ ಸಂಹಾರವಾಯಿತು. ರಾವಣನ ಸಂಹಾರ ಹಿಂಸೆಯಲ್ಲ, ಬದಲಾಗಿ ಅಹಿಂಸೆಯೇ ಆಗಿದೆ. ಅಹಿಂಸೆ ನಮ್ಮ ಧರ್ಮ; ಆದರೆ ದುರಹಂಕಾರಿಗಳಿಂದ ಹೊಡೆತ ತಿನ್ನದಿರುವುದು ಮತ್ತು ರೌಡಿಗಳಿಗೆ ಪಾಠ ಕಲಿಸುವುದು ಕೂಡ ನಮ್ಮ ಧರ್ಮವಾಗಿದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಹೇಳಿದರು. ಅವರು ಇಲ್ಲಿ ಸ್ವಾಮಿ ವಿಜ್ಞಾನಂದ ಅವರ ‘ಹಿಂದೂ ಮ್ಯಾನಿಫೆಸ್ಟೋ’ (ಹಿಂದೂಗಳ ಘೋಷಣೆ) ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದರು.

ಸರಸಂಘಚಾಲಕರು ಮಂಡಿಸಿದ ಅಂಶಗಳು

೧. ಅಹಿಂಸೆ ಭಾರತದ ಮೌಲ್ಯ. ಅದು ಭಾರತದ ಚಿಂತನೆ. ನಮ್ಮ ಅಹಿಂಸೆ ಜನರನ್ನು ಅಹಿಂಸಾವಾದಿಗಳನ್ನಾಗಿ ಮಾಡಲು ಇದೆ. ಕೆಲವರು ಅಹಿಂಸಾವಾದಿಗಳಾಗುತ್ತಾರೆ; ಆದರೆ ಕೆಲವರು ಆಗುವುದಿಲ್ಲ. ನೀವು ಏನೇ ಮಾಡಿದರೂ; ಅವರು ಎಂದಿಗೂ ಅಹಿಂಸಾವಾದಿಗಳಾಗುವುದಿಲ್ಲ.

೨. ಪಾಶ್ಚಿಮಾತ್ಯ ಚಿಂತನೆಯಲ್ಲಿ ಈ ಹಿಂಸಾತ್ಮಕ ಮತ್ತು ಅಹಿಂಸಾತ್ಮಕ ವಿಷಯಗಳು ಒಟ್ಟಾಗಿ ನಡೆಯುವುದಿಲ್ಲ. ಪಾಶ್ಚಿಮಾತ್ಯರಲ್ಲಿ ಶತ್ರು ಎಂದರೆ, ಅವನು ಒಳ್ಳೆಯವನಾಗಿರಲಿ ಅಥವಾ ಕೆಟ್ಟವನಾಗಿರಲಿ, ಅವನನ್ನು ನಾಶಪಡಿಸುವುದು ಅವರ ಉದ್ದೇಶ. ನಮ್ಮಲ್ಲಿ ‘ಶತ್ರು ಒಳ್ಳೆಯವನೋ ಅಥವಾ ಕೆಟ್ಟವನೋ?’ ಎಂದು ನೋಡಲಾಗುತ್ತದೆ. ಆದ್ದರಿಂದ ಅವರ ಕಲ್ಯಾಣವಾಗಲಿ ಎಂದು ಶಿಕ್ಷಿಸಿ ನಾವು ಅವರನ್ನು ಬಿಡುತ್ತೇವೆ. ನಾವು ಸಮತೋಲನವನ್ನು ಕಾಪಾಡಿಕೊಳ್ಳುತ್ತೇವೆ.

೩. ನಾವು ಎಂದಿಗೂ ನೆರೆಯ ರಾಷ್ಟ್ರಗಳನ್ನು ಅವಮಾನಿಸುವುದಿಲ್ಲ. ಅವರಿಗೆ ಹಾನಿ ಉಂಟುಮಾಡುವಂತಹ ಕೆಲಸಗಳನ್ನು ಮಾಡುವುದಿಲ್ಲ. ಆದರೂ ಯಾರಾದರೂ ಕೆಟ್ಟತನದಿಂದಲೇ ವರ್ತಿಸಿದರೆ, ಬೇರೆ ದಾರಿ ಏನು? ಪ್ರಜೆಗಳನ್ನು ರಕ್ಷಿಸುವುದು ರಾಜನ ಕರ್ತವ್ಯ. ಗೀತೆಯಲ್ಲಿ ಅಹಿಂಸೆಯ ಉಪದೇಶವಿದೆ. ಅರ್ಜುನನು ಹೋರಾಡಬೇಕು ಮತ್ತು ಶತ್ರುಗಳನ್ನು ಕೊಲ್ಲಬೇಕು ಎಂಬ ಕಾರಣಕ್ಕಾಗಿ ಆ ಉಪದೇಶವನ್ನು ನೀಡಲಾಗಿದೆ; ಏಕೆಂದರೆ ಆ ಸಮಯದಲ್ಲಿ ಅರ್ಜುನನ ಮುಂದೆ ಇದ್ದವರು ಉದ್ಧಾರವಾಗಲು ಬೇರೆ ಮಾರ್ಗವೇ ಇಲ್ಲದಂತಹ ಜನರು. ನಮ್ಮ ನಿಲುವು ಸಮತೋಲನವನ್ನು ಕಾಪಾಡುವುದು. ನಾವು ಆ ಸಮತೋಲನವನ್ನು ಮರೆತಿದ್ದೇವೆ. ಸಮತೋಲನವನ್ನು ಕಾಪಾಡುವುದು ನಮ್ಮ ಧರ್ಮ, ಎಂದು ಹೇಳಿದರು.