ಕಾಶ್ಮೀರದ ಮಸೀದಿಗಳಿಂದ ಪಹಲ್ಗಾಮ್ ದಾಳಿಯ ಖಂಡನೆ!

  • ಹಲವು ಕಡೆ ಬಂದ್ ಆಚರಣೆ

  • ಮೇಣದಬತ್ತಿ ಮೆರವಣಿಗೆ ನಡೆಸಿ ವಿರೋಧ

ಶ್ರೀನಗರ (ಜಮ್ಮು-ಕಾಶ್ಮೀರ) – ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಾಶ್ಮೀರಿ ನಾಗರಿಕರು ಖಂಡಿಸಿದ್ದಾರೆ. ಪಹಲ್ಗಾಮ್ ಜನರು ಮೇಣದಬತ್ತಿ ಮೆರವಣಿಗೆ ನಡೆಸಿ ಈ ದಾಳಿಯನ್ನು ವಿರೋಧಿಸಿದರು, ಹಾಗೆಯೇ ಕಾಶ್ಮೀರದಲ್ಲಿ ಹಲವು ಕಡೆ ಬಂದ್ ಆಚರಿಸಲಾಯಿತು. ಅನೇಕ ಮಸೀದಿಗಳಲ್ಲಿ ಈ ದಾಳಿಯನ್ನು ಖಂಡಿಸಲಾಯಿತು. ‘ಈ ದಾಳಿಯು ಇಸ್ಲಾಂ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಮತ್ತು ಈ ದಾಳಿಯು ಕಾಶ್ಮೀರದ ಶಾಂತಿ ಮತ್ತು ಏಕತೆಯನ್ನು ನಾಶಪಡಿಸುವ ಸಂಚು’ ಎಂದು ಮಸೀದಿಗಳಲ್ಲಿ ಹೇಳಲಾಯಿತು.

1. ‘ಕಾಶ್ಮೀರ ನಮ್ಮ ಮನೆ ಮತ್ತು ನಾವು ಅದನ್ನು ಭಯೋತ್ಪಾದಕರ ಕೈಗೆ ಹೋಗಲು ಬಿಡುವುದಿಲ್ಲ’ ಎಂದು ಮಸೀದಿಗಳಲ್ಲಿ ಘೋಷಣೆಗಳನ್ನು ಕೂಗಲಾಯಿತು. ‘ಹೇಡಿಗಳಂತೆ ದಾಳಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಹ ಒತ್ತಾಯಿಸಲಾಯಿತು.

2. ಕಿಶ್ತವಾಡ ಮಸೀದಿಯಿಂದ ಹೇಳಿಕೆ ನೀಡಲಾಗಿದ್ದು, ‘ಪಹಲ್ಗಾಮ್ ದಾಳಿಯನ್ನು ಇಡೀ ಇಸ್ಲಾಮಿ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಮತ್ತು ಸರಕಾರದಿಂದ ತನಿಖೆಯನ್ನು ಒತ್ತಾಯಿಸುತ್ತದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು’ ಎಂದು ಹೇಳಿದೆ. ಈ ದಾಳಿಯ ಖಂಡನೆಯ ಅಂಗವಾಗಿ ಏಪ್ರಿಲ್ 23 ರಂದು ಕಿಶ್ತವಾಡನಲ್ಲಿ ಬಂದ್ ಆಚರಿಸಲಾಯಿತು.

3. ಬಾರಾಮುಲ್ಲಾ ಮತ್ತು ಶ್ರೀನಗರದಲ್ಲಿ ಸ್ಥಳೀಯ ಜನರು ಮೇಣದಬತ್ತಿ ಮೆರವಣಿಗೆ ನಡೆಸಿ ದಾಳಿಯನ್ನು ಖಂಡಿಸಿದರು. ಶ್ರೀನಗರದ ಜನನಿಬಿಡ ಪ್ರದೇಶವಾಗಿದ್ದ ಲಾಲ್ ಚೌಕ್ ದಾಳಿಯ ಘಟನೆಯ ನಂತರ ಸಂಪೂರ್ಣವಾಗಿ ಖಾಲಿಯಾಗಿತ್ತು. ಜಮ್ಮುವಿನ ಕತ್ರಾದಲ್ಲಿಯೂ ಬಂದ್ ಆಚರಿಸಲಾಯಿತು, ಇದರಿಂದ ಶ್ರೀ ವೈಷ್ಣೋದೇವಿ ದರ್ಶನಕ್ಕೆ ಬಂದ ಭಕ್ತರಿಗೆ ತೊಂದರೆ ಎದುರಿಸಬೇಕಾಯಿತು.

ಪಂಜಾಬ್‌ನಲ್ಲೂ ಮುಸಲ್ಮಾನರಿಂದ ಖಂಡನೆ!

ಪಂಜಾಬಿನ ಲೂಧಿಯಾನದಲ್ಲಿ ಪಹಲ್ಗಾಮ್ ದಾಳಿಯನ್ನು ಮುಸಲ್ಮಾನರು ಖಂಡಿಸಿದರು. ಅಲ್ಲಿನ ಜಾಮಾ ಮಸೀದಿಯ ಹೊರಗೆ ಭಯೋತ್ಪಾದಕರ ಪ್ರತಿಕೃತಿಗಳನ್ನು ದಹಿಸಿದರು. ಈ ಬಗ್ಗೆ ಮುಸ್ಲಿಂ ನಾಯಕ ಮಹಮ್ಮದ್ ಮುಸ್ತಕಿಮ್ ಮಾತನಾಡಿ ಕಾಶ್ಮೀರದಲ್ಲಿ ಭಯೋತ್ಪಾದಕರು ನಿರಾಯುಧ ಜನರ ಮೇಲೆ ನಡೆಸಿದ ದಾಳಿ ಖಂಡನೀಯವಾಗಿದೆ. ಇಡೀ ಮುಸ್ಲಿಂ ಸಮಾಜವು ಇದನ್ನು ವಿರೋಧಿಸುತ್ತದೆ ಎಂದು ಮುಸ್ಲಿಂ ನಾಯಕರು ಹೇಳಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರು ಕೇವಲ ಖಂಡನೆಯಿಂದ ಸುಮ್ಮನಿರಬಾರದು, ಈ ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಮುಸಲ್ಮಾನರನ್ನು ವಿರೋಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಹಾಯ ಮಾಡಬೇಕು.
  • ಈ ಮೂಲಕ ಸ್ಥಳೀಯ ಮುಸಲ್ಮಾನರು ಕಾಶ್ಮೀರದಿಂದ ಗಡಿಪಾರುಗೊಂಡ ಹಿಂದೂಗಳ ಪುನರ್ವಸತಿಗಾಗಿ ಮುಂದಾಗಬೇಕು, ಅವರ ಆಸ್ತಿಯ ಅತಿಕ್ರಮಣವನ್ನು ತೆರವುಗೊಳಿಸಲು ಸಹಾಯ ಮಾಡಬೇಕು.