ನ್ಯಾಯಮೂರ್ತಿಗಳ ಪ್ರಮಾಣ ವಚನ !

ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸುಟ್ಟ ನೋಟುಗಳು ಪತ್ತೆಯಾಗಿದ್ದ ದೆಹಲಿ ಉಚ್ಚನ್ಯಾಯಾಲಯದ ಅಂದಿನ ನ್ಯಾಯಮೂರ್ತಿ ಯಶವಂತ ವರ್ಮಾ ಅವರು ಈಗ ಅಲಹಾಬಾದ್‌ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಈ ಪ್ರಮಾಣವಚನ ಸ್ವೀಕಾರವು ದೊಡ್ಡ ಪ್ರಮಾಣದ ಚರ್ಚೆಗಳಿಗೆ ಕಾರಣವಾಗಿದೆ. ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ೫೦೦ ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಈ ವಿಷಯದ ಬಗ್ಗೆ ಅವರಿಗೆ ಯಾವುದೇ ಸ್ಪಷ್ಟನೆ ನೀಡಲು ಸಾಧ್ಯವಾಗಲಿಲ್ಲ. ಸ್ವತಃ ಸರ್ವೋಚ್ಚ ನ್ಯಾಯಾಲಯವು ಈ ಘಟನೆ ಯನ್ನು ದಾಖಲಿಸಿಕೊಂಡಿತ್ತು. ಸರ್ವೋಚ್ಚ ನ್ಯಾಯಾಲಯವೇ ನ್ಯಾಯಮೂರ್ತಿ ವರ್ಮಾ ಅವರಿಗೆ ಈ ನೋಟುಗಳ ಬಗ್ಗೆ ಸ್ಪಷ್ಟನೆ ನೀಡಲು ಹೇಳಿತ್ತು. ‘ಈ ನೋಟುಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ’, ಕೇವಲ ಇಷ್ಟೇ ಹೇಳಿ ನೋಟುಗಳ ಪ್ರಕರಣದಿಂದ ನ್ಯಾಯಮೂರ್ತಿ ವರ್ಮಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜನಸಾಮಾನ್ಯರಿಗೆ ಅನಿಸುತ್ತದೆ. ಅವರ ಈ ಉತ್ತರದಿಂದ ಸಮಾಧಾನವಾಗದ ಕಾರಣ ಅವರನ್ನು ಅಲಹಾಬಾದ್‌ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು, ಅಂದರೆ ಅವರ ಮೇಲಿನ ಆರೋಪಗಳ ತನಿಖೆ ಇನ್ನೂ ಪೂರ್ಣಗೊಳ್ಳಬೇಕಿದೆ. ಹೀಗಿದ್ದರೂ ಅವರು ಮತ್ತೆ ಇನ್ನೊಂದು ಪ್ರತಿಷ್ಠಿತ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಿದ್ದು ಜನಸಾಮಾನ್ಯರಿಗೆ ಆಘಾತವನ್ನುಂಟು ಮಾಡಿದೆ. ಜನತೆ-ಸರ್ಕಾರ, ಜನತೆ-ಪೊಲೀಸರ ನಡುವಿನ ಯಾವುದೇ ವಿವಾದಗಳಿದ್ದರೂ, ನ್ಯಾಯಾಧೀಶರು ಅದರ ಬಗ್ಗೆ ಸೂಕ್ತ ನ್ಯಾಯ ಅಥವಾ ತೀರ್ಪು ನೀಡುತ್ತಾರೆ. ಇದಕ್ಕಾಗಿ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿರಲು ಸಾಧ್ಯವಾದಷ್ಟು ಪಕ್ಷ, ಸಂಘಟನೆ, ಸಂಸ್ಥೆ ಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ, ಇದರಿಂದ ವೈಯಕ್ತಿಕ ಸ್ನೇಹ, ಉತ್ತಮ ಸಂಬಂಧ, ಆಪ್ತತೆ ಇವು ನ್ಯಾಯದಾನದ ಮೇಲೆ ಪರಿಣಾಮ ಬೀರಬಾರದು. ಕೆಲವು ಪ್ರಕರಣಗಳಲ್ಲಿ, ಒಂದು ವ್ಯಾಜ್ಯದ ಒಂದು ಕಡೆಯ ವ್ಯಕ್ತಿಯು ನ್ಯಾಯಾಧೀಶರ ವೈಯಕ್ತಿಕ ಸ್ನೇಹಿತ ಅಥವಾ ಸ್ನೇಹ ಸಂಬಂಧ ಹೊಂದಿದ್ದರೆ, ಅವರು ಅಂತಹ ತೀರ್ಪುಗಳಿಂದ ದೂರವಿರುತ್ತಾರೆ, ಅಂದರೆ ಆ ವ್ಯಾಜ್ಯವನ್ನು ಇತರ ನ್ಯಾಯಾಧೀಶರಿಗೆ ನಡೆಸಲು ನೀಡುತ್ತಾರೆ. ಇದು ನಿಜಕ್ಕೂ ಉತ್ತಮ ಪದ್ಧತಿ; ಆದರೆ ಕೆಲವರು ಇದನ್ನು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ. ನ್ಯಾಯಾಧೀಶರು ಎಷ್ಟು ನಿಷ್ಪಕ್ಷಪಾತವಾಗಿರಲು ಪ್ರಯತ್ನಿಸುತ್ತಾರೋ ಅಷ್ಟು ನ್ಯಾಯದಾನದ ಮೇಲೆ ಪರಿಣಾಮ ಬೀರುವುದಿಲ್ಲ

ನ್ಯಾಯಮೂರ್ತಿಗಳ ಮೇಲೆ ಕ್ರಮ ಯಾವಾಗ ?

ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ನೋಟುಗಳ ಕಂತೆಗಳು ಪತ್ತೆಯಾದ ವಿಷಯದಲ್ಲಿ, ಅವರು ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ ಮತ್ತು ಈ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದ್ದಾರೆ. ವಾಸ್ತವವಾಗಿ, ಈ ಪ್ರಕರಣದ ಗಾಂಭೀರ್ಯವು ಕೇವಲ ೩-೪ ದಿನಗಳ ಕಾಲ ಸುದ್ದಿಗಳ ಮೂಲಕ ತಿಳಿದುಬಂದಿತು; ಆದರೆ ಕ್ರಮದ ದೃಷ್ಟಿಯಿಂದ ಏನಾದರೂ ಆಯಿತೆಂದು ಜನರಿಗೆ ಅನಿಸಲಿಲ್ಲ. ಈ ಬಗ್ಗೆ ಕೆಲವು ರಾಜಕೀಯ ಪಕ್ಷಗಳು, ತಿಳಿದಿರುವವರು ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿ ‘ಸಂಬಂಧಪಟ್ಟ ನ್ಯಾಯಮೂರ್ತಿಗಳನ್ನು ಹುದ್ದೆಯಿಂದ ತೆಗೆದುಹಾಕಬೇಕು’ ಎಂದು ಮಾತ್ರ ಹೇಳಿಕೆ ನೀಡಿದರು. ಇದರ ಹೊರತಾಗಿ, ಸಾಮಾನ್ಯವಾಗಿ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವ ರಾಜಕೀಯ ಪಕ್ಷಗಳು ಸಹ ಈ ಗಂಭೀರ ವಿಷಯದಲ್ಲಿ ವಿಶೇಷ ಆಸಕ್ತಿ ತೋರಿಸಲಿಲ್ಲ. ಆದ್ದರಿಂದ ಅವರ ನಿಲುವಿನ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತವೆ, ಅವರಿಗೆ ಏನಾದರೂ ಸಂಬಂಧಗಳಿವೆಯೇ ? ನ್ಯಾಯಮೂರ್ತಿ ವರ್ಮಾ ಅವರ ಕೋಣೆಯಲ್ಲಿ ಹಣ ಇಟ್ಟವರು ಯಾರು ? ಅವರ ವಿರುದ್ಧ ಪಿತೂರಿ ನಡೆಸಿದವರು ಯಾರು ? ಅಥವಾ ಯಾವುದಾದರೂ ವ್ಯಾಜ್ಯಕ್ಕಾಗಿ ಉದ್ದೇಶಪೂರ್ವಕವಾಗಿ ಹಣ ನೀಡಿ ನಂತರ ಅದನ್ನು ಸುಡಲಾಯಿತೇ ? ಅಥವಾ ಸ್ವತಃ ನ್ಯಾಯಮೂರ್ತಿಗಳೇ ಈ ಹಣವನ್ನು ತೆಗೆದುಕೊಂಡಿದ್ದಾರೆಯೇ ? ಇಂತಹ ಅನೇಕ ಪ್ರಶ್ನೆಗಳು ಜನಸಾಮಾನ್ಯರ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಹಣದ ಸ್ವರೂಪವನ್ನು ನೋಡಿದರೆ, ಈ ಹಣವು ಒಂದೇ ಬಾರಿಗೆ ಸಿಕ್ಕಿಲ್ಲ, ಕೆಲವು ದಿನಗಳಿಂದ ಸಿಗುತ್ತಿತ್ತು ಎಂದು ಮೇಲ್ನೋಟಕ್ಕೆ ಅನಿಸುತ್ತದೆ ಮತ್ತು ಕ್ರಮದ ಸುಳಿವು ಸಿಕ್ಕಿದ್ದರಿಂದ ಅದನ್ನು ಸುಡಲಾಯಿತೇ ? ಎಂಬ ಅನುಮಾನವೂ ಮನಸ್ಸಿನಲ್ಲಿ ಬರುತ್ತದೆ. ಈ ಪ್ರಶ್ನೆಗಳ ಉತ್ತರಗಳು ನ್ಯಾಯಮೂರ್ತಿಗಳ ತನಿಖೆ ನಡೆಸುವವರಿಗೆ ಎಷ್ಟು ಮುಖ್ಯವೋ ಅಷ್ಟೇ ಜನಸಾಮಾನ್ಯರಿಗೂ ಮುಖ್ಯವಾಗಿವೆ.

ನ್ಯಾಯಾಂಗ ವ್ಯವಸ್ಥೆಯಿಂದ ಕೊನೆಯ ನಿರೀಕ್ಷೆ !

ಪ್ರಜಾಪ್ರಭುತ್ವದ ೪ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯಂತಹ ಒಂದು ಸ್ತಂಭವು ಪ್ರಸ್ತುತ ಉಳಿದಿರುವ ಅಲ್ಪಸ್ವಲ್ಪ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಂದರೆ ಇತರ ೩ ಸ್ತಂಭಗಳಿಂದ ನಿರಾಶೆ ಉಂಟಾಗಿದ್ದರೂ ಅಥವಾ ಈ ಸ್ತಂಭಗಳಿಂದ ಅನ್ಯಾಯವಾಗಿದ್ದರೂ, ನ್ಯಾಯಾಲಯಗಳು ಮಾತ್ರ ಏಕೈಕ ಆಶಾಕಿರಣವಾಗಿವೆ. ಆದ್ದರಿಂದ ಎಲ್ಲಿಯಾದರೂ ಅನ್ಯಾಯವಾಗಿದೆ ಎಂದು ವ್ಯಕ್ತಿ, ಸಂಸ್ಥೆ, ಸಮಾಜಕ್ಕೆ ಅನಿಸಿದರೆ ಅವರು ನ್ಯಾಯಾಲಯದ ಬಾಗಿಲು ತಟ್ಟುತ್ತಾರೆ. ಕೆಳ ನ್ಯಾಯಾಲಯ ದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ವ್ಯಕ್ತಿಯು ನ್ಯಾಯ ಪಡೆಯಲು ಪ್ರಯತ್ನಿಸುತ್ತಲೇ ಇರುತ್ತಾನೆ. ಆದ್ದರಿಂದ ಕಡಿಮೆಪಕ್ಷ ನ್ಯಾಯಾಂಗ ವ್ಯವಸ್ಥೆಯು ಭ್ರಷ್ಟಾಚಾರ, ಲಂಚಗುಳಿತನದಿಂದ ಮುಕ್ತವಾಗಿರಬೇಕು ಎಂಬುದು ಜನಸಾಮಾನ್ಯರ ಸಹಜ ಭಾವನೆ ಯಾಗಿದೆ; ಏಕೆಂದರೆ ಅದು ಅವರಿಗೆ ಕೊನೆಯ ಆಧಾರವಾಗಿದೆ. ಅಂತಹದರಲ್ಲಿ ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಅಂಗವಾದ ನ್ಯಾಯಾಧೀಶರೊಬ್ಬರ ಭ್ರಷ್ಟಾಚಾರದ ಬಗ್ಗೆ ಅನುಮಾನ ಉಂಟಾದಾಗ, ಇತರ ಎಲ್ಲ ವಿಷಯಗಳನ್ನು ಬದಿಗಿಟ್ಟು ಅವರ ತನಿಖೆಗೆ ಆದ್ಯತೆ ನೀಡಬೇಕಾಗಿತ್ತು. ಅದು ಆಗದೆ, ಅವರಿಗೆ ಬೇರೆಡೆ ಸೇವೆ ಸಲ್ಲಿಸಲು ಅವಕಾಶ ನೀಡುವುದು, ಅಂದರೆ ಅಲ್ಲಿನ ಜನರಿಗೆ ಮತ್ತೆ ಅನ್ಯಾಯ ಮಾಡಿದಂತಾಗುವುದಿಲ್ಲವೇ ? ನ್ಯಾಯಮೂರ್ತಿ ವರ್ಮಾ ಅವರ ಈ ಹಣದ ಪ್ರಕರಣ ಬಹಿರಂಗವಾದ ನಂತರ, ಸರ್ವೋಚ್ಚ ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳು ‘ತಮ್ಮ ಆಸ್ತಿಯನ್ನು ಘೋಷಿಸಿಕೊಳ್ಳುತ್ತೇವೆ’ ಎಂದು ಪ್ರಶಂಸನೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂದರೆ ಜನರ ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ಮೇಲಿನ ನಂಬಿಕೆ ಉಳಿಯಲಿ ಎಂಬುದು ಈ ಉತ್ತಮ ನಿರ್ಧಾರದ ಉದ್ದೇಶವಾಗಿದೆ; ಆದರೆ ಯಾರ ಮೇಲೆ ಆರೋಪಗಳಿವೆಯೋ ಅವರ ಗತಿ ಏನು ? ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಗಮನಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರಬಹುದು; ಆದರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈಗ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯೋಚಿಸಿದರೆ, ಪ್ರಸ್ತುತ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ಬಾಕಿ ಇವೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಂದೆ ವಿಷಾದ ವ್ಯಕ್ತಪಡಿಸಿ ದುಃಖವನ್ನೂ ವ್ಯಕ್ತಪಡಿಸಿದ್ದರು. ನ್ಯಾಯಮೂರ್ತಿಗಳನ್ನು ನೇಮಿಸುವ ‘ಕೊಲಿಜಿಯಂ’ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಕೆಲವೇ ಮತ್ತು ಸಂಬಂಧಿಕರಿರುವ ವ್ಯಕ್ತಿಗಳಿಗೆ ಸೆಷನ್ಸ್‌ನಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ನ್ಯಾಯಮೂರ್ತಿ ಹುದ್ದೆ ಸಿಗುತ್ತದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ ಅವರು ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದಾರೆ. ಅದು ಇನ್ನಷ್ಟು ಆಗಬೇಕಿದೆ. ಮುಖ್ಯವಾಗಿ ಆರೋಪಗಳು ಬಂದಾಗ, ಸಂಬಂಧಪಟ್ಟ ಹುದ್ದೆಯ ಮುಖ್ಯಸ್ಥರು ಆರೋಪ ಸಾಬೀತಾಗುವವರೆಗೆ ಸ್ವಯಂಪ್ರೇರಿತರಾಗಿ ಹುದ್ದೆಯಿಂದ ದೂರವಿರಬೇಕು ಎಂಬುದು ನಿರೀಕ್ಷಿತವಿದೆ. ಇಲ್ಲದಿದ್ದರೆ ಅವರ ಹುದ್ದೆಯಿಂದ ಅವರ ತನಿಖೆಯ ಮೇಲೆ ಪರಿಣಾಮ ಬೀರಿ ವ್ಯಾಜ್ಯವು ಪ್ರಭಾವಿತವಾಗಬಹುದು. ಆದ್ದರಿಂದ ನ್ಯಾಯಮೂರ್ತಿ ವರ್ಮಾ ಅವರ ಈ ಪದಗ್ರಹಣದ ಬಗ್ಗೆ ಸರಕಾರ ಹಸ್ತಕ್ಷೇಪ ಮಾಡಲಿದೆಯೇ ? ಇದು ಮುಖ್ಯ ಪ್ರಶ್ನೆಯಾಗಿದೆ.