ಮುರ್ಶಿದಾಬಾದ್ ಹಿಂಸಾಚಾರದ ಪ್ರಕರಣ
ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸುವ ಬೇಡಿಕೆಯ ಅರ್ಜಿಯ ಮೇಲೆ ತಕ್ಷಣ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು, “ಪರಿಸ್ಥಿತಿ ಗಂಭೀರವಾಗಿರುವುದರಿಂದ ಕೇಂದ್ರವು ಕಲಂ 355 ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಇದಕ್ಕೆ ನ್ಯಾಯಾಲಯವು, “ನಮ್ಮ ಮೇಲೆ ಈಗಾಗಲೇ ಶಾಸಕಾಂಗದ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪವಿದೆ. ಅಂತಹ ಪರಿಸ್ಥಿತಿಯಲ್ಲಿ ನಾವು ರಾಷ್ಟ್ರಪತಿಗಳಿಗೆ ಸೂಚನೆ ನೀಡಬೇಕೆಂದು ನೀವು ಬಯಸುತ್ತೀರಾ? ಈ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿ ಮುಂದಿನ ವಿಚಾರಣೆಯನ್ನು ಮೇ 29 ರಂದು ನಿಗದಿಪಡಿಸಿತು. ಮುರ್ಶಿದಾಬಾದ್ ಹಿಂಸಾಚಾರದ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 3 ಸದಸ್ಯರ ಸಮಿತಿಯನ್ನು ರಚಿಸಬೇಕೆಂದು ಸಹ ಈ ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಲಯವು ಜೈನ್ ಅವರ ಬೇಡಿಕೆಯನ್ನು ತಿರಸ್ಕರಿಸಿತು ಮತ್ತು ಈ ಬೇಡಿಕೆಗಳನ್ನು ಪರಿಗಣಿಸುವ ಮೊದಲು ಸಾಂವಿಧಾನಿಕ ಮಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ ಎಂದು ಹೇಳಿತು.
ಕಲಂ 355 ಮತ್ತು ಕಲಂ 356 ರ ನಡುವಿನ ವ್ಯತ್ಯಾಸ!
ಕಲಂ 355 ರ ಪ್ರಕಾರ, ರಾಜ್ಯ ಸರಕಾರವು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸದಿದ್ದಾಗ, ಕೇಂದ್ರಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿದೆ. ಸಂವಿಧಾನದ ಕಲಂ 355 ಮತ್ತು 356 ರ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಕಲಂ 356 ರ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಲಾಗುತ್ತದೆ ಮತ್ತು ರಾಜ್ಯ ಸರಕಾರವನ್ನು ವಿಸರ್ಜಿಸಲಾಗುತ್ತದೆ, ಆದರೆ ಕಲಂ 355 ರ ಅಡಿಯಲ್ಲಿ ಹಾಗಾಗುವುದಿಲ್ಲ. ರಾಜ್ಯ ಸರಕಾರವು ಅಧಿಕಾರದಲ್ಲಿರುತ್ತದೆ; ಆದರೆ ರಾಜ್ಯದ ಆಂತರಿಕ ಮತ್ತು ಬಾಹ್ಯ ಭದ್ರತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಎಲ್ಲಾ ಅಧಿಕಾರಗಳು ಕೇಂದ್ರಕ್ಕೆ ಹೋಗುತ್ತವೆ. ಪಶ್ಚಿಮ ಬಂಗಾಳ ರಾಜ್ಯ ಪೊಲೀಸರು ನೇರವಾಗಿ ಕೇಂದ್ರದ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ ಎಂದು ನ್ಯಾಯಾಲಯ ಹೇಳಿತು.